ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ ಹಚ್ಚಿದ್ದ ಯುವಕನಿಂದ ಚಳ್ಳಕೆರೆ ತಹಶೀಲ್ದಾರ್‌ ವಾಹನಕ್ಕೆ ಬೆಂಕಿ! ಜುಲೈ 21ರಂದು ಪೃಥ್ವಿರಾಜ್‌ ತಾಯಿ ರತ್ನಮ್ಮ ಪೊಲೀಸ್‌ ಠಾಣೆಗೆ ತೆರಳಿ ನನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಲು ಮುಂದಾಗಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸದೇ ವಾಪಸ್‌ ಕಳುಹಿಸಿದ್ದರು. ಚಳ್ಳಕೆರೆ: ಬೆಂಗಳೂರಿನಲ್ಲಿ ವಿಧಾನಸೌಧದ ಎದುರು ತನ್ನ ಸ್ಕೂಟರ್‌ಗೇ ಬೆಂಕಿ ಹಚ್ಚಿದ್ದ ಯುವಕ ಇದೀಗ ಚಳ್ಳಕೆರೆಯಲ್ಲಿ ತಹಶೀಲ್ದಾರ್‌ ವಾಹನಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ.ಗಾಂಧಿನಗರದ ನಿವಾಸಿಯಾದ ಎಂ ಪೃಥ್ವಿರಾಜ್‌, ಪೆಟ್ರೊಲ್‌ನೊಂದಿಗೆ ನೇರವಾಗಿ ಠಾಣೆಗೆ ತೆರಳಿದ್ದನು. ಅಲ್ಲಿ ಪೊಲೀಸರ ವಾಹನ ಇಲ್ಲದಿರುವುದನ್ನು ಕಂಡು ಪಕ್ಕದಲ್ಲಿ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನಿಂತಿದ್ದ ತಹಶೀಲ್ದಾರ್ ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ. ಅಲ್ಲದೆ ತಡೆಯಲು ಹೋದ ಕಚೇರಿ ಸಿಬ್ಬಂದಿಗೆ ಪೆಟ್ರೋಲ್‌ ಎರಚಲು ಮುಂದಾಗಿ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದರು.ಜುಲೈ 21ರಂದು ಪೃಥ್ವಿರಾಜ್‌ ತಾಯಿ ರತ್ನಮ್ಮ ಪೊಲೀಸ್‌ ಠಾಣೆಗೆ ತೆರಳಿ ನನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಲು ಮುಂದಾಗಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸದೇ ವಾಪಸ್‌ ಕಳುಹಿಸಿದ್ದರು. ನಂತರ ವಾಪಸಾಗಿದ್ದ ಪೃಥ್ವಿರಾಜ್‌ ಪೊಲೀಸ್‌ ಠಾಣೆಗೆ ತೆರಳಿ, 'ನನ್ನ ತಾಯಿಯ ದೂರು ಏಕೆ ಸ್ವೀಕರಿಸಲಿಲ್ಲ? ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದನು.ಆಗಸ್ಟ್‌ 14ರಂದು ಬೆಂಗಳೂರಿಗೆ ತೆರಳಿದ್ದ ಪೃಥ್ವಿರಾಜ್‌, ಇದೇ ವಿಚಾರಕ್ಕೆ ವಿಧಾನಸೌಧದ ಎದುರು ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದನು. ನನ್ನ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದನು. (@)